‘ಈ’ ಅನ್ನುವುದು ಲಕ್ಷ್ಮಿಯ ನಾಮ. ಅವಳೊಂದಿಗೆ ಸದಾ ಇರುವ ನಾಶವಾಗದವ ‘ಅಕ್ಷ’ ಅಂದರೆ ಭಗವಂತ. ಇವರಿಬ್ಬರ ಹೆಸರೇ ‘ಈ ಅಕ್ಷ’.
ಒಟ್ಟು ಸೇರಿದರೆ ‘ಯಕ್ಷ’.
‘ಗಾನ’ವೆಂದರೆ ಹಾಡು ಎನ್ನುವುದು ಸಾಮಾನ್ಯ ಅರ್ಥ.
‘ಗೈ’ ಎನ್ನುವ ಧಾತು ಶಬ್ದ ಎನ್ನುವ ಅರ್ಥವುಳ್ಳದ್ದು. ಅದು ವೇದಾರ್ಥ ಎಂದು ಅರ್ಥೈಸಿದಲ್ಲಿ ಭಗವತ್ಪರವಾದ ಅರ್ಥವನ್ನು ತಿಳಿಸುವುದೇ ಯಕ್ಷಗಾನ ಅನ್ನಬಹುದು. ಈ ಅರ್ಥದಲ್ಲೇ ದಶಾವತಾರ ಯಕ್ಷಗಾನ ಮಂಡಳಿ ಎನ್ನುವುದು ಯಕ್ಷಗಾನ ಮೇಳಗಳಿಗೆ ಸಾಮಾನ್ಯ ಹೆಸರು. ’ಕಮ್ ಲಾತಿ ಇತಿ ಕಲಾ’.
ಭಗವಂತನನ್ನು ತರುವ ಪರಿಕರಕ್ಕಲ್ಲವೇ ‘ಕಲಾ’ ಅನ್ನುವುದು. ಯಕ್ಷಗಾನವು ಭಗವಂತನ ಬಗ್ಗೆಯೇ ಇರುವುದರಿಂದಲ್ಲವೇ ಅದು ‘ಕಲೆ’ ಅನ್ನಿಸಲ್ಪಡುತ್ತದೆ. ಇಲ್ಲದಿದ್ದಲ್ಲಿ ಅದಮಾರು ಮಠದ ನರಹರಿ ತೀರ್ಥರು (ನರಸಿಂಹತೀರ್ಥರು) ಯಕ್ಷಗಾನ ಕಲೆಯನ್ನು ಆರಂಭಿಸಿದ್ದರೆಂಬ ಪ್ರತೀತಿ ಅರ್ಥಹೀನವಾಗುತ್ತಿತ್ತು. ಆ ಕಲೆಯಲ್ಲಿ ಊರ್ಧ್ವಪುಂಡ್ರ, ಮುದ್ರೆಗಳು ಕಾಣಿಸಿಕೊಳ್ಳುತ್ತಿರಲಿಲ್ಲ. ಹರಿನಾರಾಯಣ ಗೋವಿಂದ, ಹರೇ ರಮಣ ಗೋವಿಂದ ಇತ್ಯಾದಿ ನಾರಾಯಣನ ಸ್ತುತಿಗಳಿಂದ ತುಂಬುತ್ತಿರಲಿಲ್ಲ.
ಈ ಉದ್ದೇಶದ ಮುಂದುವರಿದ ಭಾಗ ಎಂಬಂತೆ ಯತಿಶ್ರೇಷ್ಠರ ಆಶೀರ್ವಾದದಿಂದ ತಂದೆಯಾದ ಮಂಟಪ ಕೃಷ್ಣಭಟ್ಟರ ಆಸಕ್ತಿಯಿಂದ ಕೃಷ್ಣಕುಮಾರ ಆಚಾರ್ಯರಿಗೆ ಯಕ್ಷಗಾನದ ಅಭಿರುಚಿ ಜಾಗೃತವಾಯಿತು. ದೂರದ ಮೈಸೂರಿನಲ್ಲಿ ಕೃಷ್ಣತಾತ್ಪರ್ಯ ಸಭಾ ಹುಟ್ಟಿಕೊಂಡಿತು. ತಾತ್ಪರ್ಯ ಸಿದ್ಧಿಗಾಗಿ ಮಾರ್ಕಂಡೇಯ ಪುರಾಣ ಮನನ ನೈರಂತರ್ಯ ಕಂಡಿತು. ನೈಜಾರ್ಥ ಸ್ಫುಟವಾಯಿತು. ದುರ್ಗಾ ವಿಲಾಸವು ಭಗವಂತನಿಗೆ ಅರ್ಪಿತವಾಯಿತು.
ರಾಕ್ಷಸರೆಲ್ಲರನ್ನೂ ಸಂಹರಿಸಿದ ದುರ್ಗೆಯನ್ನು ದೇವತೆಗಳು ಸ್ತುತಿಸಿದರು. ಅದೇ ನಾರಾಯಣೀ ಸ್ತುತಿಯಾಯಿತು. ದೇವಿ ತನ್ನ ಮುಂದಿನ ಲೀಲೆಯನ್ನೂ ಹೇಳಿದಳು. ಅಲ್ಲಿವರೆಗಿನ ಭಾಗ ‘ದೇವೀ ಮಾಹಾತ್ಮ್ಯ’ ಎಂದು ಅವಳಿಂದಲೇ ಉಚ್ಚರಿಸಲ್ಪಟ್ಟಿತು. ಈ ಮಾಹಾತ್ಮ್ಯವು ತನ್ನ ಸಾನ್ನಿಧ್ಯ ಸೃಷ್ಟಿಕಾರಕ ಎಂದೂ ಹೇಳಲ್ಪಟ್ಟಿತು.
(ಸರ್ವೈತನ್ಮಾಹಾತ್ಮ್ಯಮ್ ಮಮ ಸನ್ನಿಧಿಕಾರಕಮ್).
ಈ ಮಾಹಾತ್ಮ್ಯ ಒಮ್ಮೆಯಾದರೂ ಉಚ್ಚರಿಸಲ್ಪಟ್ಟರೆ ಯಾ ಕೇಳಲ್ಪಟ್ಟರೆ ನನಗೆ ಸಂತಸವಾಗುತ್ತದೆ ಎಂದು ಪಾರಾಯಣ ಕ್ರಮವೂ ಅನುಮೋದಿಸಲ್ಪಟ್ಟಿತು.
ಇದರೊಂದಿಗೆ ಆರಾಧನಾ ವಿಧಾನಗಳನ್ನೂ ದುರ್ಗೆಯೇ ಹೇಳುತ್ತಾ
"ವಿಪ್ರಾಣಾಮ್ ಭೋಜನೈರಹೋಮೈಃ ಪ್ರೇಕ್ಷಣೀಯೈರಹರನಿಶಮ್"
(ಶಾಂತನವೀ ಪಾಠ) ಅನ್ನುತ್ತಾಳೆ. ಬ್ರಾಹ್ಮಣರಿಗೆ ಭೋಜನಗಳಿಂದ, ಹೋಮಗಳಿಂದ, ಅಹರ್ನಿಶವಾದ ಅಂದರೆ ರಾತ್ರಿಯ ಹೊತ್ತು (ಅಹ್ನಿ ನಿಶಮ್) ದೃಶ್ಯ ಮಾಧ್ಯಮಗಳಿಂದ ನನ್ನನ್ನು ಸಂತೋಷಗೊಳಿಸಬಹುದು...
ಎಂದು. ರಾತ್ರಿಯ ಹೊತ್ತು ನಿದ್ದೆಯ ಹೊತ್ತು. ಈ ಸಮಯ ಎಚ್ಚರದಿಂದಿರಲು ಅಷ್ಟು ಸಾಮರ್ಥ್ಯ ಇರುವ ಮಾಧ್ಯಮ ಬೇಕು. ಆ ಸಾಮರ್ಥ್ಯ ಯಾವ ಕಲೆಗೆ ಇದೆ ಹೇಳಿ. ಯಕ್ಷಗಾನದವರನ್ನು ಹೊರತುಪಡಿಸಿ ಯಾರಲ್ಲಿ ಕೇಳಿದರೂ ಇಲ್ಲವೇ ಇಲ್ಲ ಅನ್ನುತ್ತಾರೆ. ಅದು ನಿಜವೂ ಕೂಡ. ಯಕ್ಷಗಾನದಲ್ಲಿ ಮಾತ್ರ ಅಂತಹ ಸಾಮರ್ಥ್ಯ ಇದೆ. ಇದು ದೇವಿಯ ಯಕ್ಷಗಾನ ಮಾತ್ರ ಎಂದು ತಿಳಿಯುವಂತಿಲ್ಲ.
"ಯೋ ದೇವಾನಾಮ್ ನಾಮಧ ಏಕ ಏವ"
ಅಂದರೆ ಎಲ್ಲವೂ ಭಗವಂತನದೇ. ಇಲ್ಲಿ ವಿಶೇಷತಃ ಹೇಳಲ್ಪಟ್ಟಿದೆ ಅಷ್ಟೇ..
ಇಂತಹ ಯಕ್ಷಗಾನದ ಮೂಲಕ ದುರ್ಗಾರಾಧನೆಯ ಕೃಷ್ಣಕುಮಾರ ಆಚಾರ್ಯರ ಸಂಕಲ್ಪ ಕೃಷ್ಣ ತಾತ್ಪರ್ಯವನ್ನು ಪಸರಿಸಲಿ, ನಿಜವಾದ ಅರ್ಥದಲ್ಲಿ ಯಕ್ಷಗಾನವು ಆಟವಾಗಲಿ (ಅಟ ಗತೌ).
ಎಲ್ಲರೂ ಈ ಅನುಸಂಧಾನ ಪೂರ್ವಕವಾಗಿ ಈ ಪ್ರಸಂಗ ದೃಶ್ಯಕ್ಕೆ ಬರುವಂತೆ ಮಾಡಿ ಎಲ್ಲರೂ ಅದನ್ನು ನೋಡುವ ಮೂಲಕ ಬಯಲಾಟವಾಗಲಿ. ಯಕ್ಷಗಾನವೆನ್ನುವ ಷಡ್ರಸಭೋಜನವನ್ನು ನಿತ್ಯ ಉಣ್ಣುವ ಕಟೀಲಿನ ಭ್ರಮರಾಂಬಿಕೆ ಎನಿಸಿದ ದುರ್ಗಾದೇವಿ ಕೃಷ್ಣಕುಮಾರ ಆಚಾರ್ಯರಿಂದ ಇನ್ನಷ್ಟು ಸಾರಸ್ವತ ಸೇವೆಯನ್ನು ಸ್ವೀಕರಿಸಲಿ ಎಂದು ಆಶಿಸುತ್ತೇನೆ.
- ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣ, ಕಟೀಲು