Monday 24 August 2015

ಸೃಷ್ಟಿಪ ಕಾರ್ಯವು ಅಷ್ಟೊಂದು ಘನವಲ್ಲ

ಬ್ರಹ್ಮ..... ಪ್ರಪಂಚ ಅನ್ನುವುದು ಅಚೇತನಾತ್ಮಕವಾದುದು. ಪೃಥಿವೀ, ಅಪ್, ತೇಜಸ್ಸು, ವಾಯು, ಆಕಾಶಗಳೆಂಬುದು ಸೇರಿ ಪ್ರಪಂಚ ಎನ್ನಿಸಲ್ಪಡುತ್ತದೆ. ಆಕಾಶ, ಜಲಗಳನ್ನು ನಾವೇ ಕಾಣುತ್ತಿದ್ದೇವೆ.
"ಆಕಾಶಾದ್ವಾಯುಃ, ವಾಯೊರಗ್ನಿಃ, ಅಗ್ನೇರಾಪಃ, ಅದ್ಭ್ಯಃ ಪೃಥಿವೀ"
ಎನ್ನುವ ನಿತ್ಯವಾದ ವೇದವಾಕ್ಯದಂತೆ ವಾಯು ಹಾಗೂ ತೇಜಸ್ಸು ಇದ್ದಿರಲೇಬೇಕು. ಹುಡುಕಬೇಕಷ್ಟೇ. ಪೃಥಿವೀ ತತ್ವವು ಇದೆಯೋ ಇಲ್ಲವೋ ಎನ್ನುವುದು ಪ್ರತ್ಯಕ್ಷಕ್ಕೂ ಅನುಮಾನಕ್ಕೂ ಸಿಗದು. ಇಲ್ಲವೆಂದೇ ಭಾವಿಸಿದಲ್ಲಿ ಸೃಷ್ಟಿಯೇ ಸಾಧ್ಯವಾಗದು. ಇದೆ ಎಂದರೆ ಮುಂದೆ ದೊರಕೀತು.
ಮೊದಲಾಗಿ ಸೃಷ್ಟಿ ಎಂದರೆ ಏನು ಎನ್ನುವುದನ್ನು ತಿಳಿಯಲೇಬೇಕು. ತಿಳಿದುಕೊಳ್ಳೋಣ. ಆಮೇಲಲ್ಲವೇ ಅದರಲ್ಲಿ ಕಾರ್ಯಪ್ರವೃತ್ತನಾಗಲು ನಿನಗೆ ಸಾಧ್ಯ. ’ಸೃಜ ವಿಸರ್ಗೇಎನ್ನುವುದು ಅದರ ಮೂಲಾರ್ಥ. ಅಂದರೆ ಇದ್ದದ್ದನ್ನು ಹೊರಗೆಡಹುವುದು ಅಂದರೆ ನಿನ್ನಿಂದ ಉಂಟು ಮಾಡುವುದು ಎಂದರ್ಥವಲ್ಲವಲ್ಲ. ಸ್ತ್ರೀ ಪುರುಷರ ಸಮ್ಮಿಲನದಿಂದ ಅಂದರೆ ಶುಕ್ಲಶೋಣಿತದ ಸಂಯೋಗದಿಂದ ಉಂಟಾಗುವ ಧಾತು ಏನಿದೆಯೋ ಅದೇ ಪಾತ್ರವಾಗಿರುವ ಸಂದರ್ಭದಲ್ಲಿ ಯಾವುದೋ ಪೂರ್ವಜನ್ಮದ ಕರ್ಮವಿಶೇಷದಿಂದ ಪ್ರಾಪ್ತವಾಗಲೇಬೇಕಾದ ಜನ್ಮವನ್ನು ಪಡೆಯಬಹುದಾದ ಆತ್ಮವನ್ನು ಇರಿಸುವುದು ಸೃಷ್ಟಿಯ ಕಾರ್ಯ. ಇದಕ್ಕಿಂತ ಹೊರತಾದ ಯಾವ ಕರ್ತವ್ಯವೂ ಬ್ರಹ್ಮನದ್ದಲ್ಲ. ಇದನ್ನು ಘನವಾದ ಕಾರ್ಯ ಅನ್ನೋಣವೇ.
ಜೀವಿಗೆ ತನ್ನ ಜೀವಿತದ ಅವಸ್ಥೆ ಆರು. ಅಸ್ತಿ, ಜಾಯತೇ, ವರ್ಧತೇ, ಪರಿಣಮತೇ, ಪರಿಕ್ಷೀಯತೇ, ಪ್ರಣಶ್ಯತಿ ಎಂದು. ನಿತ್ಯವಾದ ಆತ್ಮದ ಇರುವಿಕೆಯನ್ನು ಅಸ್ತಿ ಅಂದರೆ ಇದೆ ಅನ್ನುತ್ತಾರೆ. ಇದರಲ್ಲಿ ಯಾರ ಅತ್ರವೂ ಇರಲಾರದು. ಮೊದಲೇ ಹೇಳಿದಂತೆ ಶುಕ್ಲಶೋಣಿತದ ಸಂಯೋಗದಲ್ಲಿ ನಿರ್ಮಿತವಾದ ಪಾತ್ರೆಯಲ್ಲಿ ಇದ್ದ ಜೀವಿಯ ಸೇರುವಿಕೆಯು ಜಾಯತೇ ಎನ್ನುವ ಅವಸ್ಥೆಯನ್ನು ಪಡೆದುಕೊಳ್ಳುತ್ತದೆ. ಇದನ್ನೇ ಸೃಷ್ಟಿ ಅನ್ನಬಹುದು. ಜೀವಿಯು ಗರ್ಭದಲ್ಲಿ ಬೆಳೆಯುತ್ತ ಹಾಗೂ ಗರ್ಭಾ ನಂತರದಲ್ಲಿ ಅಚೇತನಾತ್ಮಕ ವಸ್ತುಗಳ ಸೇರ್ಪಡೆಯಾಗಿ ಅದರ ದೇಹವು ಬೆಳೆಯುವುದನ್ನು ವರ್ಧತೇ ಅನ್ನುತ್ತಾರೆ. ಬೆಳವಣಿಗೆಯು ಸ್ತಬ್ಧವಾಗುವುದನ್ನು ಪರಿಣಮತೇ ಎನ್ನಬೇಕು. ನಂತರ ಅಚೇತನಾತ್ಮಕ ವಸ್ತುಗಳ ಅದರ್ಶನ ಯಾ ಲೋಪವಾಗುತ್ತಾ ಬರುವುದನ್ನು ಪರಿಕ್ಷೀಯತೇ ಅನ್ನುವುದು. ಜೀವಿಯ ಜನ್ಮದ ಆಯುಷ್ಯ ಮುಗಿಯಿತು ಎಂದಾದಾಗ ದೇಹವನ್ನು ಬಿಟ್ಟು ಹೊರಟ ಜೀವಿಯು ಪುನಃ ಅಸ್ತಿ ಎನ್ನುವುದನ್ನು ಪಡೆಯುವ ಕ್ಷಣಕ್ಕೆ ಪ್ರಣಶ್ಯತಿ ಎನ್ನುವುದು ಅರ್ಥ. ಅಸ್ತಿ ಎನ್ನುವುದು ಸಾರ್ವಕಾಲಿಕ. ಜಾಯತೇ ಅನ್ನುವಲ್ಲಿ ಶುಕ್ಲಶೋಣಿತ ಸಂಯೋಗವು ಅಚೇತನಾತ್ಮಕ ವಸ್ತುಗಳ ಕೂಡುವಿಕೆಯಿಂದ ಸಿದ್ಧವಾದದ್ದು. ಅದು ಸ್ಥಿತಿಯ ಕೆಲಸ. ಮುಂದೆಯೂ ಅದನ್ನೇ ವರ್ಧತೇ ಎನ್ನುವ ಅವಸ್ಥೆಗೂ ಮುಂದುವರಿಸುವುದೂ ನಾನು ಇದನ್ನೇ. ನನ್ನ ಸ್ಥಿತಿಯ ಕೆಲಸದ ಪಾತ್ರೆಯಲ್ಲಿ ಕರ್ಮಾನುಬಂಧವಾಗಿ ಜೀವಿಯನ್ನು ಸೇರಿಸುವ ಸಣ್ಣ ಕಾಯಕ ನಿನ್ನದು. ಇದರ ನಂತರ ವರ್ಧತೇ, ಪರಿಣಮತೇ, ಪರಿಕ್ಷೀಯತೇ ಎನ್ನುವ ಮೂರು ಅವಸ್ಥೆಗಳನ್ನು ಸ್ಥಿತಿಯ ಹೊಣೆಹೊತ್ತ ನಾನು ನಿರ್ವಹಿಸಬೇಕು. ಕೊನೆಯ ಅವಸ್ಥೆಯಲ್ಲಿ ಸೃಷ್ಟಿಯಲ್ಲು ಅಚೇತನಾತ್ಮಕ ವಸ್ತುವಿನೊಡನೆ ಸಂಯೋಜನೆಯನ್ನು ಹೊಂದಿದ್ದ ಚೇತನಾತ್ಮಕ ವಸ್ತುವನ್ನು ವಿಯೋಜಿಸುವ ಕೆಲಸವನ್ನು ಲಯಕರ್ತೃವಾದ ಶಿವ ಎಸಗುತ್ತಾನೆ. ಸೃಷ್ಟಿ ಹಾಗೂ ಲಯ ಎನ್ನುವುದರಲ್ಲಿ ಕ್ಷಣಕಾಲದ ಕೆಲಸವಿರುವುದರಿಂದ ಮಹತ್ವವನ್ನು ಹೇಗೆ ಕಾಣಲಾದೀತು ಹೇಳು. ಕೆಲಸಗಳೂ ಕರ್ಮಾನುಬಂಧಿಯಾಗಿರುವುದರಿಂದ ನಿಮಗೆ ಅದರಲ್ಲಿ ಸ್ವಾತಂತ್ರ್ಯವೂ ಇಲ್ಲ.
ನೀನು ಪ್ರಶ್ನಿಸಬಹುದು. ಸ್ಥಿತಿಯೂ ಕರ್ಮಾನುಬಂಧಿಯಲ್ಲವೇ ಎಂದು. ಜೀವಿಗೆದತ್ತ ಸ್ವಾತಂತ್ರ್ಯಎಂಬ ಮನೋಧರ್ಮ ಪ್ರತಿಯೊಂದು ಜನ್ಮದಲ್ಲೂ ಇರುತ್ತದೆ. ಅದರಂತೆ ಜನ್ಮದಲ್ಲಿ ಸುಕೃತವನ್ನೋ ದುಷ್ಕೃತವನ್ನೋ ಮಾಡಬಲ್ಲವನಾಗುತ್ತಾನೆ. ಅದರಿಂದ ನಂತರದ ಜನ್ಮದ ಅವನ ಯೋನಿ ನಿರ್ಧಾರವಾಗುತ್ತದೆ ಎನ್ನುವುದು ನಿರ್ವಿವಾದ. ಅಂತಹ ಅವನ ದತ್ತ ಸ್ವಾತಂತ್ರ್ಯಕ್ಕೆ ಅಗತ್ಯವೆನಿಸಬಹುದಾದ ಉಚಿತ ಸಂದರ್ಭವನ್ನೂ ಒದಗಿಸಿಕೊಡುವ ಹೊಣೆಗಾರಿಕೆಯೂ ಸ್ಥಿತಿಯ ಕಾರ್ಯವಾದ ಕಾರಣ ನಾನು ಕರ್ಮಾಧ್ಯಕ್ಷ ಎನಿಸಿಕೊಂಡಿದ್ದೇನೆ.
ಆದ್ದರಿಂದಲೇ... ಅಮ್ಮ ಹೇಳಿದ್ದು. ’ಹೋದ ಕಲ್ಪದಿ ಲಯವಾದ ಪ್ರಪಂಚವ ಮೋದದಿ ಸೃಜಿಸುವರೇಎಂದು. ಪ್ರಪಂಚ ಸಾರ್ವಕಾಲಿಕ. ಅದು ಮೋದವಾಗಿರಬೇಕಾದರೆ ಅದರಲ್ಲಿ ಎಂಭತ್ತನಾಲ್ಕು ಲಕ್ಷ ಜೀವರಾಶಿಗಳಿರಬೇಕು. ಜೊತೆಯಲ್ಲಿ ಇದಕ್ಕೆ ಪೂರಕವಾಗಿ ಸಸ್ಯರಾಶಿಗಳು ಇನ್ನಿತರ ಪರಿಸರ ಬೇಕು ಎಂದು. ಇನ್ನೊಂದು. ಮೋದ ಎನ್ನುವುದು ಸಾತ್ವಿಕವಾದದ್ದು. ಅದು ನನ್ನ ಗುಣ. ಮೋದದಿ ಅಂದರೆ ಮೋದದ ದೆಸೆಯಿಂದ ಎನ್ನುವ ಅರ್ಥ. ನನ್ನ ಸಹಕಾರದಿಂದಲೇ ಸೃಷ್ಟಿಯಾಗಬೇಕು ಎಂದು. ಹಾಗಿರುವಾಗ ಅಹಮಿಕೆ ಯಾಕೆ?
-  ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣಕಟೀಲು
          Vidwan Sriharinarayanadasa Asranna, Kateelu

Monday 10 August 2015

ನನ್ನೂರು ಮತ್ತು ಯಕ್ಷಗಾನ

ಎಲ್ಲಿಂದ ಆರಂಭಿಸಲಿ, ಎಲ್ಲಿಗೆ ನಿಲ್ಲಿಸಲಿ ಅಂದೇ ತಿಳಿಯಲಾಗದ ವಿಚಾರ. ಕಟೀಲಿನ ತಾಯಿ ಭ್ರಮರಾಂಬೆಯಿಂದ ಆರಂಭಿಸಲೋ, ಕಟೀಲಿನಲ್ಲಿ ಸಂದ ಯಕ್ಷಗಾನದ ಶಕಪುರುಷರಿಂದ ಆರಂಭಿಸಲೋ, ನನ್ನ ಗುರುಗಳಿಂದ ಅಥವಾ ಗುರು ಪರಂಪರೆಗಳಿಂದ ಆರಂಭಿಸಲೋ, ನಾಟಕ ಪಟು ಯಕ್ಷಗಾನದ ಭಾವ ನಿರ್ದೇಶಕ ನನ್ನ ತಂದೆಯಿಂದ ಆರಂಭಿಸಲೋ, ದೊಡ್ಡಪ್ಪ ಗೋಪಾಲಕೃಷ್ಣ ಆಸ್ರಣ್ಣರ ಯಕ್ಷಗಾನದ ತುಡಿತವನ್ನು ಹೇಳಿ ಆರಂಭಿಸಲೋ, ನನ್ನ ಬಾಲ್ಯದ ಮನೆಯನ್ನು ನೆನಪಿಸಿ ಆರಂಭಿಸಲೋ  ಒಂದೂ ತಿಳಿಯುವುದಿಲ್ಲ.
ಯಕ್ಷಗಾನ ಬೆಳೆದ ನನ್ನ ಊರಿನ ಹೆಸರೇ ಕಟೀಲು. ಇಷ್ಟೆಂದರೆ ಕೆಲವನ್ನು ಬರಹ ಗೌರವದ (ಉದ್ದವಾಗುವಿಕೆ) ಭಯದಿಂದ ಬಿಡಬಹುದು ಅನ್ನಿ. ಅದನ್ನು ಈ ಹಿಂದೆ ಕಟೀಲಿನ ಹಾಗೂ ಯಕ್ಷಗಾನದ ಸಂಬಂಧದ ಬಗೆಗಿನ ಲೇಖನದಲ್ಲೂ ಹೇಳಿದ್ದೇನೆ. ಅದನ್ನು ಬದಿಗಿರಿಸಿ ಆರಂಭಿಸೋಣ.
ಯಕ್ಷಗಾನದ ಊರಿನಲ್ಲಿ ಹುಟ್ಟಿದವ ನಾನು ಎಂಬುದೇ ಹೆಮ್ಮೆ ನನಗೆ. ಇದಲ್ಲದೆ ನನ್ನ ತಂದೆ ವಿದ್ವಾಂಸರು, ಸಂಸ್ಕೃತ ಶಿರೋಮಣಿ ಹಾಗೂ ಕನ್ನಡ ಪಂಡಿತ ಪದವೀಧರರು, ಶಾಲಾ ಅಧ್ಯಾಪಕರು ಬೇರೆ, ಸ್ವತಃ ನಾಟಕ ಬರೆದು ಅಂದು ಜಿಲ್ಲೆಯಲ್ಲಿ ಪ್ರಸಿದ್ಧರಾದವರು, ಕರ್ನಾಟಕ ಯಕ್ಷಗಾನ ಮಂಡಳಿಯ ಪ್ರಾಯೋಗಿಕ ನಡೆಯಲ್ಲಿ (Practice) ನಿರ್ದೇಶಿಸುತ್ತಿದ್ದವರು, ಕೆಲವು ವರ್ಷ ಸಾಲಿಗ್ರಾಮ ಮೇಳಕ್ಕೂ ಕೂಡ. ತಾಯಿ ಹಿಂದಿನವರಾದರೂ ವಿದ್ಯಾಭ್ಯಾಸವನ್ನು ಶಾಲೆಯಲ್ಲಿ ಹಾಗೂ ಅಧ್ಯಾಪಕ ತಂದೆಯಲ್ಲಿ ಪಡೆದವರು. ದಾಸರ ಪದ್ಯಗಳನ್ನು ಅರ್ಥೈಸಿ ಅನುಭವಿಸಿ ಹಾಡುವವರು. ಇದಲ್ಲದೆ ಇವರ ಎಂಟನೇ ಗರ್ಭದಲ್ಲಿ ಜನಿಸಿದವನಾದ್ದರಿಂದ ಆಗಲೇ  ಪ್ರಬುದ್ಧರೆನಿಸಿದ ಅಕ್ಕಂದಿರ ಜೊತೆ ಬೆರೆತವ ನಾನು. ನನ್ನ ತಂದೆ ತನ್ನ ತೀವ್ರ ಅನಾರೋಗ್ಯದಿಂದ ಶಸ್ತ್ರಕ್ರಿಯೆಗೆ ತುತ್ತಾಗಿ  ಒಂದು ಮೈಲಿ ದೂರದ ಮನೆಗೆ ನಡೆದು ಹೋಗುವ ಆ ಕಾಲದಲ್ಲಿ ನಡೆಯಲು ಅಸಾಧ್ಯವಾದದ್ದು, ಕಟೀಲಿನ ರಥಬೀದಿಯ ಅರ್ಚಕರ ಮನೆಯಲ್ಲಿ ಅವರನ್ನು ಉಳಿಯುವಂತೆ ಮಾಡಿತು. ಇದರಿಂದ ನನ್ನ ಮೂರನೆಯ ತಿಂಗಳಿನಿಂದಲೇ ಯಕ್ಷಗಾನದ ಸದ್ದು ನನಗೆ ಹೃದ್ಯವಾಯಿತು. ನೆನಪಿಗೆ ಉಳಿಯುವ ಕೌಮಾರ್ಯದಲ್ಲೇ ಯಕ್ಷಗಾನದ ದಿಗ್ಗಜರ ಕುಣಿತ, ಆರ್ಭಟ, ರಸೋತ್ಕರ್ಷತೆಯ ಪರಾಕಾಷ್ಟೆಯು ನನ್ನನ್ನು ರಂಗಸ್ಥಳದ ಮುಂದೆ ಎಳೆದು ಕೊಂಡೊಯ್ಯಿತು. ತಂದೆಯ ಹಳೆಯ ಬೈರಾಸು ನನಗೆ ಆಸನವಾಯಿತು. (ಆಸ್ರಣ್ಣರ ಗೌರವದ ಬೆಂಚು ನನಗೆ ಬೇಡವಾಗಿತ್ತು). ಹೀಗೆ ನಿದ್ದೆ ಬರುವವರೆಗೆ ಆಟ. ಆಮೇಲೆ ಹತ್ತು ಹೆಜ್ಜೆಯ ನಡಿಗೆಯ ಮನೆಯಲ್ಲಿ ನಿದ್ದೆ. ಇದು ನನಗೆ ಪರಿಪಾಠವಾಯಿತು. 
ಆಟದ ದೇವರ ಪೂಜೆ ನೋಡಲು ಅರ್ಧ ಗಂಟೆ ಮುಂಚೆಯೇ ಚೌಕಿಯತ್ತ ಧಾವಿಸಿ ನಾನು ಮೊದಲಾಗಿ ನೋಡುತ್ತಿದ್ದದ್ದು ಭಾಗವತರ ವೇಷ ಬಟವಾಡೆಯ ಕಾಗದ; ಅನಂತರ ರೆಂಜಾಳ ರಾಮಕೃಷ್ಣರೋ, ಪಡ್ರೆ ಚಂದು ಅವರೋ, ಗೋಪಾಲ ಭಟ್ಟರೋ, ಸುಮ್ಮನೆ ಕುಳಿತಿದ್ದರೆ ಬಲಿಪ ನಾರಾಯಣ ಭಾಗವತರೋ ನನ್ನ ಮಾತುಕತೆಗೆ ಆಶ್ರಯದಾತರಾಗಿ ಒದಗುತ್ತಿದ್ದರು. ಅಂದಿನ ಪ್ರಸಂಗದ ಕಥೆ ಅವರಲ್ಲಿ ಕೇಳುತ್ತಿದ್ದೆ. ಆಮೇಲೆ ರಂಗಸ್ಥಳದ ಮುಂದೆ ಕೂರುತ್ತಿದ್ದೆ. ಚಿಕ್ಕಪ್ರಾಯದ ಬಾಲೆ ಚದುರೆ .. ಅಲ್ಲಿಂದಲೇ ನನಗೆ ನೋಡಬೇಕು. ವೆಂಕಪ್ಪಯ್ಯರ ಶ್ರುತಿಬದ್ಧವೆನಿಸದ (ಅವರ ಗಂಟಲಿನ ಸಮಸ್ಯೆ ಬಂದ ನಂತರದ ಸ್ಥಿತಿ) ಪದ್ಯ ಮುಗಿದ ನಂತರ ಬಲಿಪರ ಯಾ ಇರಾ ಭಾಗವತರ ಪದ್ಯವನ್ನೂ ಎಂದೂ ಬಿಡಲಾರದೆ ಆಸ್ವಾದಿಸುತ್ತಾ ಬೈರಾಸಿನಲ್ಲಿ ಆಟ ನೋಡುವುದೇ ಅಂದಿಗೆ ಆಪ್ಯಾಯಮಾನವಾಗಿತ್ತು.
ಶಾಲೆ ಆರಂಭವಾದಂದಿನಿಂದ ವಿದ್ವಾನ್ ಪಿ.ಕೃಷ್ಣ ಭಟ್ ಅವರ ಚಾಟಿ ಏಟು ಆಟವನ್ನು ಕಡಿಮೆ ಮಾಡುತ್ತಿತ್ತೋ ಏನೋ; ಒಂದುವೇಳೆ ಅವರು ಯಕ್ಷಗಾನಾಸಕ್ತರು ಆಗದೇ ಇರುತ್ತಿದ್ದರೆ. ಆದರೆ ಅವರ ಆಸಕ್ತಿಯೂ ಯಕ್ಷಗಾನವಾದ್ದರಿಂದ ಶಿಷ್ಯತ್ವ ಅವರ ಮುಂದೆ ಸುಲಭವಾಯಿತು. ಹೆಜ್ಜೆ ಕಲಿತೆ. ಪು. ಶ್ರೀನಿವಾಸ ಭಟ್ಟರು ಮಗುವಿನೊಂದಿಗೆ ಮಗುವಾಗಿರುತ್ತಿದ್ದ ಕಾರಣ ಅವರು ನನಗೆ ಯಕ್ಷಮಿತ್ರರಾಗುತ್ತಿದ್ದರು. ಇವರಿಂದ ಸ್ವಲ್ಪಮಟ್ಟಿಗೆ ವಿದ್ಯಾವಂತನಾದೆ.
ನಂತರ ಸಿಕ್ಕಿದವರು ಕೊರ್ಗಿ ವೇಂಕಟೇಶ ಉಪಾಧ್ಯಾಯರು. ನನ್ನ ಸ್ವರೂಪೋದ್ಧಾರಕರು. ಅವರಿಂದ ಕಲಿತೆ ಯಕ್ಷಗಾನ ಪಾಠವನ್ನು, ಸಂಸ್ಕೃತ ಬಾಲ ಪಾಠವನ್ನು, ಜೀವನದ ಪಾಠವನ್ನು ಮತ್ತು ಅದಕ್ಕಿಂತ ಹೆಚ್ಚಾಗಿ "ಧೈರ್ಯಮ್ ಸರ್ವತ್ರ ಸಾಧನಮ್ " ಎನ್ನುವ ಮೌಲ್ಯವನ್ನು.
ದೇವಸ್ಥಾನದ ಜಾತ್ರೆಯಲ್ಲಿ ಪಲ್ಲಕ್ಕಿ ಸುತ್ತಿನ ಯಕ್ಷಗಾನ ಸೇವೆಗೆ ಗೆಜ್ಜೆ ಕಟ್ಟುವ ಮೂಲಕ ವೇಷ ಆರಂಭಿಸಿ ಕೆಲವೊಂದು ಪಾತ್ರಗಳನ್ನು ಉಪಾಧ್ಯಾಯರ ನಿರ್ದೇಶನದಲ್ಲಿ ರಂಗಸ್ಥಳದಲ್ಲೂ ಮಾಡಿದೆ. ಇಲ್ಲಿಗೆ ಹತ್ತನೇ ತರಗತಿ ಮುಗಿದು ಉಡುಪಿಗೆ ಸಂಸ್ಕೃತ ಅಧ್ಯಯನಕ್ಕಾಗಿ ತೆರಳಿದೆ. ತೆಂಕುತಿಟ್ಟಿನ ಗಾಳಿ ಇಲ್ಲದಿರುವ ಉಡುಪಿ, ಬಡಗಿನ ಗಾಳಿ ಇಲ್ಲದ ನಾನು ಅಲ್ಲಿ ಸ್ತಬ್ಧನಾಗಿ ಹೋದೆ ಮೊದಲೆರಡು ವರ್ಷ. ಅಷ್ಟಾಗುವಾಗ ನನ್ನ ತಂದೆಯ ಅಕಾಲಿಕ ಮರಣದಿಂದ ಮನೆಯ ಹೊಣೆಗಾರಿಕೆಯು ವಿದ್ಯಾರ್ಥಿ ಜೀವನದಲ್ಲೇ ನನ್ನನ್ನು ಆಕ್ರಮಿಸಿತು. ಅಕ್ಕಂದಿರ ಮದುವೆಯಿಂದ ಹಿಡಿದು ಎಲ್ಲವೂ ಆಗಬೇಕಿತ್ತು. ಮೂರೂ ಮಗಂದಿರು ಆಗ ವಿದ್ಯಾರ್ಥಿಗಳು. ಅದೇ ನನ್ನ ಜೀವನವಾಯಿತು. ಯಕ್ಷಗಾನ ಹಗಲುಗನಸು ಅನ್ನೋಣವೇ  - ಸಂಸ್ಕೃತ ಶಾಲೆ. ರಾತ್ರಿಗನಸು ಅನ್ನೋಣವೇ ರಾತ್ರಿಯ - ಇಂಗ್ಲೀಷ್ ಶಾಲೆ. ಮಧ್ಯೆ ಪೌರೋಹಿತ್ಯ, ಆಗಮ, ಜ್ಯೋತಿಷ್ಯ, ವೇದಪಾಠಗಳ ಸಮಯ ಬೇರೆ. ಹೀಗೆ ದಿನಕ್ಕೆ ಹನ್ನೊಂದು ಗಂಟೆಯ ಪಾಠ ಕೇಳುವುದೇ ಜೀವನವಾಯಿತು. ಯಕ್ಷಗಾನದ ಕನಸಿಗೂ ಸಮಯವಿಲ್ಲವಾಯಿತು. ರಜೆ ಸಿಕ್ಕಿದರೆ ನನ್ನ ಅಲ್ಲಿನ ಖರ್ಚಿಗೆ ಮತ್ತು ಮನೆಯ ಹೊಣೆಗಾರಿಕೆಗೆ ವಿತ್ತ ಸಂಚಯನದ ಅನಿವಾರ್ಯತೆ ಜೀವನದ ದಾರಿಯನ್ನೇ ಕಸಿದುಕೊಂಡಿತು.
ಹೀಗೆ ನನ್ನ ಬದುಕಿನ ಏಳು ವರ್ಷಗಳು ಉಡುಪಿಯಲ್ಲಿ ಸಾಗುವಾಗ ನನಗೆ ಅಲ್ಲೊಂದಿಲ್ಲೊಂದು ಆಟಗಳನ್ನು, ತಾಳಮದ್ದಳೆಯನ್ನು ಸವಿಯುವ ಅವಕಾಶ ಸಿಗುತ್ತಿತ್ತು. ಸುಧಾಕರ ಆಚಾರ್ಯರ ಆಗಸ್ಟ್ ಹದಿನೈದರ ತಾಳಮದ್ದಳೆ, ಅವರ ಸಂಯೋಜನೆಯ ಆಟಗಳು ಒಂದಿಷ್ಟು ಮಾನಸಿಕ ತೃಪ್ತಿಗೆ ಕಾರಣವಾಗಿತ್ತಷ್ಟೆ. ಈ ಸಂದರ್ಭದಲ್ಲಿ ನನ್ನ ಕುಟುಂಬ ಸ್ನೇಹಿತರಾದ, ನನ್ನ ಅಣ್ಣನ ಗುರುಗಳಾದ ಮಧೂರು ನಾರಾಯಣ ರಂಗಾಭಟ್ಟರು ತನ್ನ ಇಬ್ಬರು ಮಕ್ಕಳನ್ನು ನನ್ನ ಹೊಣೆಗಾರಿಕೆಯಲ್ಲಿ ಉಡುಪಿಗೆ ಕಳುಹಿಸಿದರು. ಅವರಲ್ಲಿ ಒಬ್ಬ ದೊಡ್ಡ ಜ್ಯೋತಿಷ್ಯರಾದರೆ ಇನ್ನೊಬ್ಬ ಯಕ್ಷಗಾನ ಪಟು ಎನಿಸಿದರು. ಅವರೇ ಎಲ್ಲರಿಗೂ ಪರಿಚಿತರಾದ ವಾಸುದೇವ ರಂಗಾಭಟ್ಟರು. ತನ್ನ ಬಾಲ್ಯದ ಹವ್ಯಾಸವನ್ನು ಉಡುಪಿಯಲ್ಲೂ ಮುಂದುವರಿಸಲು ಕೃಷ್ಣಾಪುರ ಮಠದ ಆಶ್ರಯದಲ್ಲಿದ್ದ ವಿದ್ಯಾದಾಯಿನಿ ಸಂಘವು ಅವರಿಗೆ ಸಹಕರಿಸಿತು. ಕಾಸರಗೋಡಿನವರಾದ ಹುಟ್ಟುಕುರುಡ ಗೋಪಾಲಕೃಷ್ಣ ಎಂಬುವವರು ಅವರ ಸಹ ಅರ್ಥಧಾರಿಯಾದರು. ಗೋಪಾಲಕೃಷ್ಣರಿಗೆ ನಾನು ಸಂಸ್ಕೃತ ಪಾಠ ಮಾಡುತ್ತಿದ್ದೆ. ಮೊದಲೇ ಸಲುಗೆಯಲ್ಲಿದ್ದ ವಾಸುದೇವ ರಂಗಾಭಟ್ಟರು ಮತ್ತು ಈ ಗೋಪಾಲಕೃಷ್ಣ ಭಟ್ಟರ ಒತ್ತಾಯವು ನನ್ನನ್ನೂ ವಿದ್ಯಾದಾಯಿನಿಗೆ ಎಳೆದುಕೊಂಡು ಹೋಯಿತು. ಭೀಷ್ಮ ಸೇನಾಧಿಪತ್ಯದ ದ್ರೋಣನ ಅರ್ಥದಿಂದ ನನ್ನ ತಾಳಮದ್ದಲೆಯ ಜೀವನ ಆರಂಭವಾಯಿತು. ಆದಿತ್ಯವಾರ ಸಂಸ್ಕೃತ ಶಾಲೆ ಇದ್ದು ಸಂಧ್ಯಾಶಾಲೆ ಇಲ್ಲದಿದ್ದುದರಿಂದ ಆ ಸಮಯ ಯಕ್ಷಗಾನದ ತಾಳಮದ್ದಲೆಯ ಶಾಲೆಯಾಯಿತು. ಜೀವನದ ಇಷ್ಟ ಶಾಲೆಯೂ ಆಯಿತು. ವಾಸುದೇವ ರಂಗಾಭಟ್ಟರು ನನ್ನ ಗುರುಗಳಾದರು. ಅಂದಿನಿಂದ ಆಸಕ್ತಿ ಪುನಃ ಜಾಗೃತಗೊಂಡಿತು. ಸಂತಸದ ಜೀವನದ ಆರಂಭವಾಯಿತು.
ನನ್ನ ದೊಡ್ಡಪ್ಪ ಆರಂಭಿಸಿದ ಅಷ್ಟಮಿಯ ತಾಳಮದ್ದಲೆಯಲ್ಲಿ ಅವರೇ ಅರ್ಥ ಹೇಳುತ್ತಿದ್ದರು. ನನ್ನ ತಂದೆ ಮೊದಲೇ ಇಹಲೋಕದಿಂದ ನಿರ್ಗಮಿಸಿದ್ದರಿಂದ ಅವರ ನಂತರ ಯಾರೂ ಆಸ್ರಣ್ಣರು ಅರ್ಥ ಹೇಳುತ್ತಿರಲಿಲ್ಲ. ಆದರೆ ಆ ತಾಳಮದ್ದಳೆ ನಿಲ್ಲದಂತೆ ಕಾಪಿಟ್ಟವರು ಪ್ರಸಿದ್ಧರಾದ ವಿದ್ವಾನ್ ಕೊರ್ಗಿ ವೇಂಕಟೇಶ ಉಪಾಧ್ಯಾಯರು ಹಾಗೂ ಅವರ ಶಿಷ್ಯ ಕವಿ, ನಾಟ್ಯ ಗುರು, ಅರ್ಥಧಾರಿ, ಹಿಮ್ಮೇಳದ ಭಾಗವತ, ಮದ್ದಳೆಗಾರರೂ ಆದ, ಅಪ್ರಸಿದ್ಧರಾದ ಕಟೀಲು ಲಕ್ಷ್ಮೀನಾರಾಯಣ ಭಟ್ಟರೆಂಬ ಅಸಾಮಾನ್ಯ ಪಟು. ನಾನು ಅರ್ಥ ಹೇಳುತ್ತೇನೆ ಎಂದು ತಿಳಿದ ಕೂಡಲೆಯೇ ಅರ್ಥ ಹೇಳಲು ಒತ್ತಾಯಿಸಿದರು. ಅಂದು ಕಟೀಲಿನಲ್ಲಿ ತಾಳಮದ್ದಲೆಯಲ್ಲಿ ನನ್ನ ರಂಗಪ್ರವೇಶ ಆರಂಭವಾಯಿತು. ಕೃಷ್ಣ ಸಂಧಾನದ ವಿದುರನೇ ಕಟೀಲಿನ ಮೊದಲ ಅರ್ಥ. ವಾಸುದೇವ ಸಾಮಗರ ಕೃಷ್ಣನಿಗೆ ಕೊರ್ಗಿಯವರ ಕೃಷ್ಣ.
ಲಕ್ಷ್ಮೀನಾರಾಯಣ ಭಟ್ಟರಿಂದ ನನ್ನ ಅಣ್ಣ ಪ್ರಸಾದ ಆಸ್ರಣ್ಣರೂ ತಾಳಮದ್ದಳೆಗೆ ಎಳೆಯಲ್ಪಟ್ಟರು, ನಾವು ಮೂವರೂ ಸೇರಿ ಪ್ರತಿ ಶನಿವಾರ ತಾಳಮದ್ದಳೆ ಆರಂಭಿಸಿದೆವು. ಸಮಯವಿದ್ದಲ್ಲಿ ಕೊರ್ಗಿಯವರೂ ಬಂದು ತಿದ್ದುತ್ತಿದ್ದರು. ಕಟೀಲು ರಮಾನಂದ ರಾಯರು ಉಚಿತ ಭಾಗವತಿಕೆಯನ್ನು, ನಾರಾಯಣ ಭಟ್ಟರು ಮದ್ದಳೆಯನ್ನು, ದೇವಿಪ್ರಸಾದ್ ಚೆಂಡೆಯನ್ನೂ ನುಡಿಸಿದರು. ಹೀಗೆ ಆರಂಭವಾದ ಈ ತಾಳಮದ್ದಳೆಗೆ ಪ್ರಸಂಗ ಪುಸ್ತಕವನ್ನು ಪು. ಶ್ರೀನಿವಾಸ ಭಟ್ಟರು ಒದಗಿಸಿದರು. ರಾಮಾಯಣದ ಒಂದು ಪದ್ಯವನ್ನೂ ಬಿಡದೆ ಎಲ್ಲಿಯವರೆಗೆ ಸಾಗುತ್ತದೋ ಅಲ್ಲಿಯವರೆಗೆ ಮಾತ್ರ ಮಾಡಿ ಧಾರಾವಾಹಿಯಂತೆ ಇಡೀ ರಾಮಾಯಣವನ್ನು ತಾಳಮದ್ದಳೆಯ ರೂಪದಲ್ಲಿ ನಡೆಸಿದೆವು.
ಅನಂತರ ನಾನು ಕಲಿತ ನಾಲ್ಕಕ್ಷರವನ್ನು ತಾಳಮದ್ದಳೆಯಲ್ಲಿ ಉಪಯೋಗಿಸಲು ಆರಂಭಿಸಿದೆ. ನನ್ನಣ್ಣ ವೇದಾಂತ ವಿದ್ವಾಂಸನಾದ ಪ್ರಸಾದ ಆಸ್ರಣ್ಣರು ನನ್ನ ತಾತ್ವಿಕ ಹಾಗೂ ಪೌರಾಣಿಕ ಗುರುಗಳಾದರು. ಲಕ್ಷ್ಮೀನಾರಾಯಣ ಭಟ್ಟರು ವಾದದ ಸದಸ್ಯರಾದರು. ರಂಗಭಟ್ಟರು ಮುಂದುವರಿದ ಚರ್ಚೆಯ ಭಾಗವಾದರು. ಕೊರ್ಗಿಯವರು ನಿರ್ಣಯದ ಅಧ್ಯಾಪಕರಾದರು. ಹೀಗೆ ಮುಂದುವರಿದು ಕೊರ್ಗಿ ಅವರ ಮಾರ್ಗದರ್ಶನದಲ್ಲಿ ವಾಸುದೇವ ರಂಗಭಟ್ಟರ ಸಂಯೋಜಕತ್ವದಲ್ಲಿ ಶೇಣಿ ಸಾಮಗರು ಹಲವಾರು ಭಾರಿ ಬಂದು ನಮ್ಮ ಅಜ್ಜಂದಿರಾದರು. ತಾಳಮದ್ದಳೆಯ ಹುಚ್ಚು ಅಂಟಿಸಿದ ಹರಿಕಾರರಾದರು. ಸಾಗಿತು ಹೀಗೆಯೇ  ನಮ್ಮ ಅಭಿರುಚಿ. ಮುಂದೆ ತಾಳಮದ್ದಳೆಯ ಸಪ್ತಾಹವೂ ಅದೇ ವಾಸುದೇವ ರಂಗಭಟ್ಟರ ಸಂಯೋಜಕತ್ವದಲ್ಲಿ ಹನ್ನೊಂದು ವರ್ಷ ನಡೆಯಿತು.
ಈ ಮಧ್ಯೆ ನನ್ನ ತಂದೆ ಮಾಡಿಸುತ್ತಿದ್ದ ಯಕ್ಷಗಾನದಲ್ಲಿ ಗೆಜ್ಜೆ ಕಟ್ಟಿಸುತ್ತೇನೆಂದು ಹರಕೆ ಹೊತ್ತ ತಾಯಿಯ ಹರಕೆಗಾಗಿ ಪುನಃ ಗೆಜ್ಜೆ ಕಟ್ಟಲು ಆರಂಭಿಸಿದೆ. ದೀರ್ಘಕಾಲದ ಬಿಡುವಿಕೆಯಿಂದಾಗಿ ಹೆಜ್ಜೆ ಮರೆತು ಹೋದದ್ದರಿಂದ ಅದನ್ನು ಹೆಚ್ಚು ರೂಢಿಸಿಕೊಂಡಿಲ್ಲ ಅನ್ನಿ. ಅದು ನಮ್ಮ ಆಟದ ಸೇವೆಗೆ ಸೀಮಿತವಾಗಿಯೇ ಇಂದಿಗೂ ಇದೆ. ಪ್ರಸ್ತುತ ಯಕ್ಷಗಾನ ತಾಳಮದ್ದಳೆಯು ಸೇವೆ ಎನ್ನುವ ಸಂಕಲ್ಪದಲ್ಲಿ ದೇವಸ್ಥಾನಗಳಿಗೆ ಸೀಮಿತವಾಗಿ ಅರ್ಥ ಹೇಳುವವನಾಗಿ ಇದ್ದೇನೆ.
ನನ್ನ ಈ ಆಸಕ್ತಿಯ ಯಕ್ಷಗಾನ ಮತ್ತೂ ಗರಿಬಿಡುವಂತೆ ಮಾಡಿದ್ದು ‘ಶ್ರೀದುರ್ಗಾ ಮಕ್ಕಳ ಮೇಳ’ ಅನ್ನುವ ನಾನೇ ಕಟ್ಟಿ ಬೆಳೆಸಿದ ಸಂಸ್ಥೆಯಿಂದ. ಇದಕ್ಕೆ ಪ್ರೇರಕರು ನನ್ನ ಅಧ್ಯಾಪಕರಾದ ವಾಸುದೇವ ಶೆಣೈ ಅವರು. ಇದಕ್ಕೆ ಕಾರಣ ಕೃಷ್ಣ ಭಟ್ಟರ ನಿವೃತ್ತಿ, ಕೊರ್ಗಿಯವರ ಅನಾರೋಗ್ಯ; ಕಟೀಲಿನಲ್ಲಿ ನಿಂತ ಯಕ್ಷಗಾನದ ತರಗತಿ. ಇದು ಬೆಳೆದು ವಾರ್ಷಿಕೋತ್ಸವದ ಆಚರಣೆಗೆ ಬಂದಾಗ ಯಕ್ಷಗಾನದ ಮೇರು ವ್ಯಕ್ತಿಗಳಿಗೆ ಸನ್ಮಾನ ಮಾಡಬೇಕೆಂದು ಕಂಡಿತು. ಅದಕ್ಕಾಗಿ ನನ್ನ ಹಿತೈಷಿ ಮಾನ್ಯ ಶ್ರೀಧರ ಶೆಟ್ಟಿ ಮಾಣಿಲದವರ ಪರಿಚಯದಿಂದ ಡಾ. ಪದ್ಮನಾಭ ಕಾಮತರನ್ನು ಅತಿಥಿಗಳಾಗಿ ಕರೆಯುವ ಪ್ರೇರಣೆ ಬಂತು. ಇದು ಒಂದರ್ಥದಲ್ಲಿ ನನ್ನ ಯಕ್ಷ ಪಯಣದ ದಾರಿಯನ್ನೇ ಬದಲಿಸಿತು. ಅವರಿಂದ ಯಕ್ಷಮಿತ್ರ ನಮ್ಮ ವೇದಿಕೆಯ ಸದಸ್ಯನಾದೆ; ಅದರೊಳಗಿನ ಸದಸ್ಯರು ಮಿತ್ರರಾಗಿ ಲಭಿಸಿದರು. ದಿನವೊಂದಕ್ಕೆ ಕನಿಷ್ಟ ಒಂದು ಗಂಟೆಯಾದರೂ ಮೊಬೈಲ್ ಇದಕ್ಕಾಗಿ ಉಪಯೋಗವಾಗುವ ಕ್ರಮ ನಿತ್ಯವಿಧಿಯಲ್ಲಿ ಸೇರಿತು.
ಇನ್ನು ಏನಾಗುತ್ತದೋ ತಿಳಿಯುವ ಯೋಗ್ಯತೆ ಇಲ್ಲದಿದ್ದರೂ ಆದದ್ದೆಲ್ಲಾ ಒಳಿತೇ ಆಯಿತು ಅನ್ನುವ ದಾಸವಾಣಿ ಅನುಭವಕ್ಕೆ ಬಂದದ್ದಂತೂ ನಿಜ. ಹೀಗಾಗುವುದಕ್ಕೆ ಸಹಕರಿಸಿದ ಪ್ರತಿಯೊಬ್ಬನಿಗೂ, ಪ್ರತಿಯೊಂದಕ್ಕೂ ಹೇಳುತ್ತೇನೆ. "ಭೂಯಿಷ್ಠಾಂತೇ ನಮ ಉಕ್ತಿಮ್ ವಿಧೇಮ" ಅನ್ನುವ ವೇದವಾಕ್ಯವೇ ನನ್ನ ನಿತ್ಯೋಕ್ತಿಯಾಗಲೆಂದು.
      ನಮಸ್ಕಾರ.
-  ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣಕಟೀಲು
                Vidwan Sriharinarayanadasa Asranna, Kateelu

Saturday 8 August 2015

ಫಂಟಾಮೃದಂಗಮುರಜಾದಿನಿನಾದಭಂಗಿತುಂಗೀಭವಚ್ಛ್ರುತಿರಸಾಯನಯಕ್ಷಗಾನೈಃಭಕ್ತೈಃ ಸುನಾಟ್ಯಕುಶಲೈಃ ಪರಿತೋಷ್ಯಮಾಣೇ ದುರ್ಗೇ ಕಟೀಲುವರದೇ ತವ ಸುಪ್ರಭಾತಮ್!! ..

ಅಸ್ರಣ್ಣರು ಕಟೀಲು ದೇವಿಗೆ ಹೀಗೆ ಸುಪ್ರಭಾತ ಹೇಳಿ ಕವಾಟೋದ್ಘಾನೆಯನ್ನು ಮಾಡಬೇಕು ಸಮಯದಲ್ಲೂ ಯಕ್ಷಗಾನವೆನ್ನುವ ಪದ ತಾಯಿಗೆ ಕೇಳಿಸಬೇಕುರಾತ್ರಿ ಅದನ್ನು ನೋಡಬೇಕು. ಕಟೀಲಲ್ಲಿದ್ದರೆ ನೋಡಲು ಪೀಠ ಬೇಕು. ಬೇರೆಡೆ ಹೇಗೆ ನೋಡುತ್ತಾಳೋ ನಾನರಿಯೆ. ಆದರೆ ಹೋಗುತ್ತಾಳೆ ಅನ್ನುವುದು ಭಕ್ತರ ಅನುಗ್ರಹದ ಅನುಭವದಿಂದ ವೇದ್ಯವಾಗುತ್ತದೆ. ಜ್ಯೋತಿಶ್ಶಾಸ್ತ್ರವಿದರಿಗೆ ತಿಳಿಯುತ್ತದೆ. ರೀತಿ ಹೋಗಲು ಅಸಾಧ್ಯವೆಂಬ ಕಾರಣಕ್ಕೆ ರಾತ್ರಿಯೂ ಸೇರಿ ದಿನವಿಡೀ ಉತ್ಸವವಿರುವ ಕಟೀಲಿನ ಆಟದ ದಿನ ಯಕ್ಷಗಾನಕ್ಕೆ ರಜೆ ಎಂದು ಹಿಂದೆ ಅವಳೇ ಪ್ರೇರೇಪಿಸಿ ಅದನ್ನೂ ಘೋಷಿಸಿದ್ದಾಳೆ. ಏನಪ್ಪಾ ಇವಳ ಸಂಕಲ್ಪ.
ಭಾವುಕರು ಕಣ್ಮುಚ್ಚಿ ಭಜಿಸುತ್ತಾರೆ; ರಸಿಕರು ಕಣ್ಬಿಟ್ಟು ನೋಡುತ್ತಾರೆ; ಕಲಾವಿದರು ಬೆವರಿಳಿಸಿ ಕುಣಿಯುತ್ತಾರೆ; ಯಜಮಾನ, ಸೇವಾಕರ್ತರು ಮನೋಭೀಷ್ಟಗಳನ್ನು ಕೋರುತ್ತಾರೆ; ಆಸ್ರಣ್ಣರು ಪ್ರಸಾದ ತರುವಾಗ ಗೌರವದಿಂದ ಇದಿರುಗೊಳ್ಳುತ್ತಾರೆ, ಊರವರು ನಮ್ಮ ಊರಿನ ಹಬ್ಬವೆಂಬಂತೆ ಭಾಗವಹಿಸುತ್ತಾರೆ..... ಹೀಗೆ ವೈಭವವೋ ವೈಭವ. ಕಟೀಲಮ್ಮನ ಆಟ.(ಆಟ ಎಂದೂ ಯಕ್ಷಗಾನದ್ದು ಪರ್ಯಾಯನಾಮ)
  ಕಟೀಲಮ್ಮನ ಆಟಕ್ಕೆ ಪೀಠಿಕೆ ಮನ್ವಂತರದ್ದಲ್ಲ ಎಂದೇ ನನ್ನ ಊಹೆ. ಇಲ್ಲಿನ ಎಲ್ಲಾ ಕ್ರಮಗಳೂ ಅದನ್ನೇ ಸಾರುತ್ತವೆ ಅನ್ನಿಸುತ್ತದೆ. ಅತೀ ಹೆಚ್ಚು ನಡೆಯುವ ದೇವೀ ಮಹಾತ್ಮ್ಯೆ ಪ್ರಸಂಗದ ಮೂಲ ಸಪ್ತಶತೀ ಎನ್ನುವ ಮಾರ್ಕಂಡೇಯ ಪರಾಣಾಂತರ್ಗತವಾದ ಒಂದು ಭಾಗ. ದೇವಿಯ ಕಥೆಯನ್ನು ಸಾರುವ ಭಾಗ. ಅದರ ಹನ್ನೆರಡನೆಯ ಅಧ್ಯಾಯ ವೈಶಿಷ್ಟ್ಯಪೂರ್ಣವಾದ ದೇವಿಯ ವಾಕ್ಯಗಳುಳ್ಳದ್ದು. ಅವುಗಳನ್ನೇ ಮೆಲುಕು ಹಾಕೋಣ. ’ಸರ್ವಮ್ ಮಮೈತನ್ಮಾಹಾತ್ಮ್ಯಮ್ ಮಮ ಸನ್ನಿಧಿಕಾರಕಮ್ (ಈವರೆಗೆ ಆದದ್ದೆಲ್ಲವೂ ನನ್ನ ಮಹಾತ್ಮೆಯಾಗಿದ್ದು ನನ್ನ ಸಾನ್ನಿಧ್ಯವನ್ನು ಸೃಷ್ಟಿಸುತ್ತದೆ). ಮಹಾತ್ಮೆ ಅಂದರೆ ಸಪ್ತಶತಿಯಲ್ಲಿರುವ ಕಥೆ ಎಂದು ತೆಗೆದುಕೊಂಡರೆ ಸಾನ್ನಿಧ್ಯ ಸೃಷ್ಟಿಯಾಗುವ ಬಗೆ ಹೇಗೆ ಎಂದು ಯೋಚಿಸಿದರೆ ಅವಳೇ ಹೇಳುತ್ತಾಳೆ....’ಪ್ರೀತಿರ್ಮೇ ಕ್ರಿಯತೇ ಸಾಸ್ಮಿನ್ ಸಕೃದುಚ್ಚರಿತೇ ಶ್ರುತೇ’.(ನನ್ನ ಮಹಾತ್ಮೆಯ ಭಾಗವನ್ನು ಓದಿದರೆ ಯಾ ಕೇಳಿದರೂ ನನಗೆ ಅದು ಪ್ರೀತಿದಾಯಕ):......ಇತ್ಯಾದಿ ವಾಕ್ಯಗಳಿಂದ. ಅದರಲ್ಲೇ ಇರುವ ಇನ್ನೊಂದು ವಾಕ್ಯ ಹೀಗಿದೆ. ’ವಿಪ್ರಾಣಾಮ್ ಭೋಜನೈರ್ಹೋಮೈಃ ಪ್ರೇಕ್ಷಣೀಯೈರಹರ್ನಿಶಮ್’ ...ಎಂದು.(ಶಾಂತನವೀ ಪಾಠ) ಇದನ್ನೇ ಕಂಡಲ್ಲಿ ಯಕ್ಷಗಾನ ಅಮ್ಮನಿಗೆ ಪ್ರೀತಿ ಎನ್ನುವುದು ಸ್ಪಷ್ಟವಾಗುತ್ತದೆ. ಸಪ್ತಶತಿಯ ಏಳುನೂರು ಮಂತ್ರಗಳ ಮೂಲಕ ಹೋಮ ಮಾಡಿದಲ್ಲಿ (ಚಂಡಿಕಾಹೋಮ), ತದಂಗತ್ವೇನ ಅವಳ ಪ್ರೀತಿಗಾಗಿ ಬ್ರಾಹ್ಮಣರಿಗೆ ಉಣಬಡಿಸುವುದರಿಂದ ಹಾಗೂ ಅಹರ್ನಿಶವಾಗಿ (ಅಹ್ನಿ ನಿಶಮ್ ಅಹರ್ನಿಶಮ್. ದಿನದಲ್ಲಿ ರಾತ್ರಿ ಅಂದರೆ ರಾತ್ರಿ ಇಡೀ ಎಂದರ್ಥ) ದೃಷ್ಯಮಾಧ್ಯಮದ ಮೂಲಕ ನೋಡಿದರೆ  ನನಗೆ ಸಂತೋಷವಾಗುತ್ತದೆ ಹಾಗೂ ನನ್ನ ಸಾನ್ನಿಧ್ಯ ಸೃಷ್ಟಿಯಾಗುತ್ತದೆ ಎಂದು. ವಾಕ್ಯಗಳು ನನ್ನದಲ್ಲ, ಪುರಾಣ ಬರೆದ ವ್ಯಾಸರದ್ದಲ್ಲ, ಅಮ್ಮ ಅಂದ ಮಾತು. ಮಾತುಗಳು ದುರ್ಗೆಯ ಸಂಕಲ್ಪದ ನುಡಿ, ರೀತಿ ನಡೆಯಿರಿ ಎಂದು ದೇವತೆಗಳಿಗೆ ನಿರ್ದೇಶಿಸಿದ್ದು.
ವಾಕ್ಯವನ್ನೇ ವಿಮರ್ಶಿಸೋಣ. ರಾತ್ರಿ ಇಡೀ ಪ್ರದರ್ಶ್ಯವಾಗುವ ಕಲೆ, ಅದನ್ನು ಕಣ್ಣುಬಿಟ್ಟು ನೋಡುವ ಕಲೆ ಯಾವುದೆಂದು ನೋಡೋಣ. ಅಂತಹ ಸಾಮರ್ಥ್ಯವಿರುವ ಶ್ರೀಮಂತಕಲೆ ಎನ್ನುವುದದ್ದಿರೆ ‘ಯಕ್ಷಗಾನ’ ಎಂದು ನಾವೆಲ್ಲ ತಲೆ ಎತ್ತಿ ಅನ್ನಬಹುದು. ಅಂತಹ ರಸವತ್ತತೆ ತುಂಬಿ ತುಳುಕುವ ಕಲೆ ನಮ್ಮ ಯಕ್ಷಗಾನ. ಆದ್ದರಿಂದಲೇ ಅದು ಯಕ್ಷಗಾನ ಅಂದರೆ ಅಲೌಕಿಕದ ಶಬ್ದ ಯಾ ಅಲೌಕಿಕ ಕಲೆ. ದೇವತೆಗಳು ದುರ್ಗೆಯ ಪ್ರೀತ್ಯರ್ಥವಾಗಿಯೇ ಕಂಡು ಹುಡುಕಿ ನಮಗಿತ್ತ ಕಲೆಆದ್ದರಿಂದಲೇ ಆಟವಾದದ್ದು. ‘ಆ’ ಅಂದರೆ ಸಮ್ಯಕ್, ‘ಅಟ’ ಅಂದರೆ ಜ್ಞಾನ ಅಂದರೆ ಸರಿಯಾಗಿ ಅವಳನ್ನು ತಿಳಯುವಂತೆ ಮಾಡುವ ಕಲೆ ಎಂದರ್ಥ. ಪದವೂ ಇತರ ಕಲೆಗಳಿಗಿಲ್ಲವಲ್ಲ.
‘ಕಮ್ ಲಾತಿ ಇತಿ ಕಲಾ’ ಎಂದು ತಿಳದವರಂದರು. ಅಕ್ಷರನಾಮದಂತೆ ‘ಕ’ ಅಂದರೆ ದೇವರು. ಅವರನ್ನು ತರುತ್ತದೆ ಆದ್ದರಿಂದ ಅದು ಕಲಾ ಅನ್ನಿಸಲ್ಪಡುತ್ತದೆ. ಆಡು ಭಾಷೆಯಲ್ಲಿ ಕಲೆ ಅನ್ನಿಸಲ್ಪಡುತ್ತದೆ. ಆದ್ದರಿಂದಲ್ಲವೇ ‘ಕಲಶ’ ಅನ್ನುವ ಶಬ್ದ ಹುಟ್ಟಿದ್ದು. ತಂಬಿಗೆಯಲ್ಲಿ ತುಂಬಿಸಲ್ಪಟ್ಟ ದ್ರವ್ಯದಲ್ಲಿ ದೇವರನ್ನು ಬರಮಾಡುವ ವಿಶೇಷ ಮಂತ್ರಗಳನ್ನು ಆವಾಹಿಸುವುದಕ್ಕೆ ‘ಕಲಾವಾಹನೆ’ ಅನ್ನುತ್ತಾರೆ. ಅಂತಹ ಕಲೆಗಳು ತಂಬಿಗೆಯಲ್ಲಿ ಮಲಗುತ್ತವೆ ಎನ್ನುವರ್ಥದಲ್ಲಿ ಕಲಶ ಅನ್ನುತ್ತಾರೆ ಅವುಗಳನ್ನು... ಯಕ್ಷಗಾನ ಅರ್ಥದಲ್ಲಿ ಯೋಚಿಸುವುದಾದರೆ ಪುರಾಣೋಕ್ತ ಕಥಾನಕಗಳ ಪ್ರದರ್ಶನಗಳ ಮೂಲಕ ನಿಜವಾದ ಕಲೆ. ದೇವೀ ಮಹಾತ್ಮೆಯೂ ಆದೀತು ಯಾ ಇನ್ನೊಂದು ಮಹಾತ್ಮೆ. ಎಲ್ಲವೂ ದೇವರ ಪ್ರೀತ್ಯರ್ಥವಾಗಿಯೇ. ‘ಯೋ ದೇವಾನಾಮ್ ನಾಮಧಾ ಏಕ ಏವ’ (ಎಲ್ಲಾ ದೇವರ ನಾಮಗಳನ್ನು ಧರಿಸಿದವನು ಒಬ್ಬನೇ ಅಂದರೆ ಪರಬ್ರಹ್ಮ) ಎನ್ನುವ ವೇದವಾಕ್ಯದಂತೆ. ಹೀಗೆ ಶ್ರೌತ ಎನಿಸಿದ ಯಕ್ಷಗಾನ ಕರಾವಳಿಯ ಜನಮಾನಸದಲ್ಲಿ ಕೃತ್ಯಾಕೃತ್ಯಗಳ ಉಪದೇಶವನ್ನು ಪಂಡಿತರಿಗೂ ಪಾಮರರಿಗೂ ಮಾಡಿ ಧರ್ಮಪ್ರಚಾರ ಮಾಡುತ್ತದೆ. ಆದ್ದರಿಂದಲ್ಲವೇ ಕಟೀಲು ಭ್ರಮರಾಂಬಿಕೆ ಯಕ್ಷಗಾನಪ್ರೀತೆ. ಅವಳಿಗೆ ಸುಪ್ರಭಾತವೂ ಅದರಿಂದಲೇ ಜೋ ಜೋ ಗೀತೆಯೂ ಅದರಿಂದಲೇ.
ಉಡುಪಿಯ ಪಲಿಮಾರು ಮಠಾಧೀಶರಾದ ವಿದ್ಯಾಧೀಶತೀರ್ಥ ಶ್ರೀಪಾದರು ಕಟೀಲಿನಲ್ಲಿ ತನ್ನ ಕಾಲಿಗೆ ಚಿನ್ನದ ಗೆಜ್ಜೆ ಕಟ್ಟಿ ಕುಣಿದು ದೇವಿಗೆ ಅರ್ಪಿಸಿದವರು. ಉಕ್ಕೇರಿದ ನೆರೆಯಲ್ಲಿ ಸಹಾಯಕ್ಕಾಗಿ ಚಾಚಿದ ಉಪಕರಣಗಳನ್ನು ಉಪಯೋಗಿಸದೆ ದೇವಿಯನ್ನು ಅಪ್ಪಿಹಿಡಿದು ದೇವಿಗೆ ತನ್ನನ್ನು ಅರ್ಪಿಸಿಕೊಂಡ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹಾಗೂ ಮುಂಬೈನಲ್ಲಿ ಪ್ರಸಿದ್ಧರಾಗಿದ್ದ ಪ್ರತಃಸ್ಮರಣೀಯರಾದ್ದ ದಿ ಗೋಪಾಲಕೃಷ್ಣ ಆಸ್ರಣ್ಣರೂ ಗೆಜ್ಜೆ ಕಟ್ಟಿ ಕುಣಿದು ಸೇವೆಯಿಂದ ಸಾರ್ಥಕ್ಯವನ್ನು ಯಕ್ಷಗಾನದಲ್ಲಿ ಅನುಭವಿಸಿದವರು. ತೆಂಕಾಗಲಿ, ಬಡಗಾಗಲಿ ಯಾವುದೇ ತಿಟ್ಟಿನ ಮೇಳ ಕಟೀಲಿನ ಸಮೀಪ ತನ್ನ ಪ್ರದರ್ಶನ ನೀಡುವಾಗ ತಾಯಿಯ ಮುಂದೆ ಬಂದು ಕುಣಿದೇ ಪ್ರದರ್ಶನ ನೀಡುವುದು ಕ್ಷೇತ್ರದ ಮಾಹಾತ್ಮ್ಯಕ್ಕೆ ಹಿಡಿದ ಕೈಗನ್ನಡಿ ಅನ್ನಬಹುದು.
ಕಟೀಲಿನ ಆಟ ಮಾಡಿಸುವ ಜನರನ್ನು ಹಿಂದೂಗಳೇ ಅನ್ನುವಂತೆಯೂ ಇಲ್ಲ. ಕ್ರೈಸ್ತರು, ಮುಸಲ್ಮಾನರೂ ಯಕ್ಷಗಾನ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಅದೇ ರೀತಿ ಒಂದೊಂದು ಊರಿನವರು ಒಟ್ಟಾಗಿ ಊರಿನ ಹತ್ತು ಸಮಸ್ತರು ಎಂದು ಹೇಳಿಕೊಂಡು ಪ್ರತಿವರ್ಷ ಆಟ ಆಡಿಸುವುದನ್ನು ಕಾಣಬಹುದಾಗಿದೆ.ಇಂತಹ ಪ್ರದರ್ಶನಗಳ, ಸಂಘಗಳ ಸಂಖ್ಯೆಯೇ ಮುನ್ನೂರಕ್ಕೆ ಮಿಕ್ಕಿ ಇದೆ. ಅವರಲ್ಲಿ ಹೆಚ್ಚಿನವರು ಸೇವೆಗಿಂತ ಹಿಂದಿನ ನಲುವತ್ತೆಂಟು ಯಾ ಇಪ್ಪತ್ತನಾಲ್ಕು ಯಾ ಕನಿಷ್ಟ ಹನ್ನೆರಡು ದಿನವಾದರೂ ವ್ರತದಿಂದ ಉಳಿದು ಸೇವೆ ಮಾಡಿಸುವುದನ್ನೂ ಕಾಣಬಹುದಾಗಿದೆ.
ಕಟೀಲಿನ ಆಟ ಹೊರಡುವುದೂ ದೀಪಾವಳಿಯ ನಂತರ ದೇವಿಯ ತಾರಾನುಕೂಲದ ದಿನ ಸಂಪ್ರದಾಯಬದ್ಧವಾಗಿ. ಅದೇ ರೀತಿ ಮುಗಿಯುವುದೂ ವೃಷಭಮಾಸದ ಹನ್ನೊಂದನೆಯ ದಿನ. ಹೀಗೆ ಎಲ್ಲವೂ ಕ್ರಮಬದ್ಧವಾಗಿಯೇ. ಸಂದರ್ಭದಲ್ಲಿ ದೇವಿಯ ಪ್ರತೀಕವಾಗಿ ಮೇಳಗಳಲ್ಲಿ ಎರಡು ಕಿರೀಟ ಹಾಗೂ ಒಂದು ಚಕ್ರ ತ್ರಿಕಾಲದಲ್ಲಿ ಪೂಜಿಸಲ್ಪಡುತ್ತದೆ. ಅದಕ್ಕಾಗಿಯೇ ಒಬ್ಬ ಅರ್ಚಕನಿರುತ್ತಾನೆ. ಯಾವುದೇ ಗದ್ದೆಯಲ್ಲಿ ಚೌಕಿ ಇರಲಿ (ವೇಷಧಾರಿಗಳ green room) ಅಲ್ಲಿ ಸಂಜೆ ಹೊತ್ತು ದೇವರು ಬಂದರೂ ಮರುದಿನ ದೇವರು ಅಲ್ಲಿಂದ ಹೊರಡುವ ತನಕ ಚೌಕಿಯೇ ದೇವಾಲಯದಂತೆ. ಇಲ್ಲಿ ಪಾದರಕ್ಷೆಗಳು ನಿಷೇಧಿಸಲ್ಪಡುತ್ತದೆ, ಸೂತಕಾದಿಗಳಿಂದ ಇರುವವರು ಪ್ರವೇಶಿಸುವಂತಿಲ್ಲ. ಹೀಗೆ, ದೇವಾಲಯದ ನಿಯಮಗಳು ಅನುಸರಿಸಲ್ಪಡುತ್ತದೆ.
ಕಟೀಲು ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಯಾವಾಗ ಆರಂಭವಾಯಿತೋ ತಿಳಿಯದು. ೧೯೭೫ರವರೆಗೆ ಒಂದೇ ಮೇಳದಲ್ಲಿ ಸೇವೆ ಆಟ ನಡೆಯುತ್ತಿತ್ತು. ಸಂದರ್ಭದಲ್ಲಿ ಸ್ಪರ್ಧೆಯ ಜೋಡಾಟಗಳೂ ನಡೆಯುತ್ತಿದ್ದ ಕಾಲ. ಆದರೆ ಕಟೀಲು ಮೇಳಕ್ಕೆ ಮಾತ್ರ ಅದು ಲೀಲಾಜಾಲ. ಸ್ಪರ್ಧೆಯಲ್ಲಿ ಸೋತ ಇತಿಹಾಸವೇ ಮೇಳಕ್ಕಿಲ್ಲ.ಇದರಿಂದಾಗಿ ಬೇರೆ ಎರಡು ಶ್ರೀಮಂತ ಮೇಳಗಳು ಮಂಕಾಗಿ ತಮ್ಮ ತಿರುಗಾಟವನ್ನೇ ನಿಲ್ಲಸಿದವಂತೆ. ೧೯೮೨ರಲ್ಲಿ ಮೂರನೇ ಮೇಳ ತಿರುಗಾಟ ಆರಂಭಿಸಿತು. ಆಮೇಲೆ ೧೯೯೩ರಲ್ಲಿ ನಾಲ್ಕು, ೨೦೧೦ರಲ್ಲಿ ಐದು, ೨೦೧೩ರಲ್ಲಿ ಆರನೇ ಮೇಳ ಹೀಗೆ ತನ್ನ ಶಾಖೆಗಳನ್ನು ವಿಸ್ತರಿಸಿ ವರ್ಷಕ್ಕೆ ಸರಾಸರಿ ೧೧೦೦ ಸೇವೆಗಳನ್ನು ಮುಗಿಸುತ್ತಿದೆ. ಆದರೆ ಇವುಗಳಲ್ಲಿ ಐನೂರು ಸೇವೆಗಳು ಖಾಯಂ ಆಗಿ ಪ್ರತಿವರ್ಷ ನಡೆಯುವವುಗಳು. ಸುಮಾರು ಇನ್ನೂರ ನಲುವತ್ತು ಆಟಗಳನ್ನು ಸಾಂದರ್ಭಿಕವಾಗಿ ಬೇಕಾದವರು ತತ್ಕಾಲ ವ್ಯವಸ್ಥೆಯಡಿ ಪಡೆದುಕೊಳ್ಳಬಹುದಾದದ್ದು. ಉಳಿದಂತೆ ಸುಮಾರು ಮುನ್ನೂರ ನಲುವತ್ತು ಆಟಗಳನ್ನು ನಿಗದಿಪಡಿಸಿ ನೀಡಿದ ದಿನದಂದು ಮುಂಗಡ ಕಾದಿರಿಸಿದ ಭಕ್ತಾದಿಗಳು ಆಡಿಸುವಂಥದ್ದು. ಹೀಗೆ ಹಂಚುವಿಕೆಯ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ. ಆದರೆ ಇಂತಹ ಮುಂಗಡ ಕಾದಿರಿಸಿದ ಭಕ್ತರ ಸಂಖ್ಯೆ ದೇವಳದಲ್ಲಿ ಎಂಟು ಸಾವಿರದ ಆರುನೂರು; ಅಂದರೆ ಸುಮಾರು ಇಪ್ಪತ್ತೈದು ವರ್ಷಗಳಿಗೆ ಸಾಕಾಗುವಷ್ಟಿದ್ದು ಕೊನೆಯ ಭಕ್ತ ಅಲ್ಲಿಯವರೆಗೆ ಕಾಯುವುದು ಅನಿವಾರ್ಯವಾಗಿದೆ.
ಸುಮಾರು ಇನ್ನೂರೈವತ್ತು ಕಲಾವಿದರು, ಇನ್ನೂರ ಎಂಭತ್ತು ಸಹಾಯಕರನ್ನೊಳಗೊಂಡ ಕಟೀಲುಮೇಳ, ಪ್ರಸ್ತುತ ಉಭಯತಿಟ್ಟುಗಳಲ್ಲೇ ಅತೀ ಹೆಚ್ಚು ಮೇಳಗಳನ್ನು ಭಕ್ತರಿಗೋಸುಗ ತನ್ನದಾಗಿಸಿಕೊಂಡಿದೆ. ಕಲೆಯು ಇದರಿಂದ ಭಕ್ತರಿಗೆ ಸೇವೆಯಿಂದ ಕೃತಾರ್ಥತಾ ಭಾವವನ್ನು, ಸಹೃದಯರಿಗೆ ರಸದೌತಣವನ್ನು, ಕಲಾವಿದರಿಗೆ ಹಾಗೂ ಸಹಾಯಕರಿಗೆ ಉದ್ಯೋಗವನ್ನು, ವಿದ್ಯುತ್ ಗುತ್ತಿಗೆದಾರರಿಗೆ, ಊರಿನ ಸಣ್ಣ ವ್ಯಾಪಾರಿಗಳಿಗೆ ವ್ಯಾಪಾರವನ್ನೂ, ಇನ್ನೂ ಅನೇಕರಿಗೆ ಅವರವರ ಮನೋಭೀಷ್ಟಗಳನ್ನು ನೀಡುತ್ತಾ ಧರ್ಮಪ್ರಚಾರದೊಂದಿಗೆ ಕಲಾಪ್ರಚಾರವನ್ನೂ ತನ್ನದಾಗಿಸಿಕೊಂಡಿದೆ.


-  ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣಕಟೀಲು
           Vidwan Sriharinarayanadasa Asranna, Kateelu